"ನನ್ನ ನಲ್ಮೆಯ ಮನದಾಳದ ಮಿಡಿತವೆ,
ಗಣೇಶನ ಹಬ್ಬ ಬಂತೆಂದರೆ ಎಲ್ಲಿಲ್ಲದೆ ನನ್ನ ಇ ಮನ ಕುಣಿಯುವುದು, ಆ ಹಬ್ಬದಲ್ಲಿ ಮಾತ್ರ ಅಲ್ಲವೇ ಗಣೇಶನಿಗೆ ಪ್ರೀಯವೆಂದು ಚಕ್ಕುಲಿ, ಪಂಚಕಜ್ಜಾಯ, ಮೋದಕ, ಕರ್ಜಿಕಾಯಿ, ಎಳ್ಳು ಉಂಡೆ ಹೀಗೆ ಹಲವು ವಿಧದ ಭಕ್ಷ್ಯ ಭೋಜ್ಯಗಳನ್ನೂ ಸವಿಯಲು ಸಾಧ್ಯವಾಗುತ್ತಿದ್ದುದು. ಅದು ಅಲ್ಲದೆ.. ಹಬ್ಬದ ಕೆಲವು ದಿನ ಮೊದಲೇ.. ಏನೇನೋ ನೆಪ ಹೇಳಿ ನಾವಿಬ್ಬರು ಶಾಲೆಗೆ ಗೈರು ಬಂಡಿಯ ಮುಂದೆ ಹಾಜರು ಎಂದು ಆಗುತ್ತಿದ್ದುದು.. ಅದೇನೋ ಕಾಣೆ ಉದ್ದ ಸೊಂಡಲಿನ, ಆಗಲ ಕಿವಿಯ, ದೊಡ್ಡ ಹೊಟ್ಟೆಯ ಅತ್ಯಾಧ್ಬುತ ಕಾರ್ಟೂನ್ ಅಂತಿರುವ ಗಣೇಶನೆಂದರೆ ಇಬ್ಬರಿಗೂ ಅಚ್ಚು ಮೆಚ್ಚು. ಅವನ ಆ ಆಕಾರಕ್ಕೆ ಬರಲು ಕಾರಣವಿರುವ ಅತಿ ರಂಜಿತ ಕಥೆಗಳನ್ನ ಕೇಳುತ್ತಲೇ ಬೆಳೆದೆವು.
ಸಿದ್ದಾಪುರವೆಂಬ ಅಂದಿನ ನಮ್ಮ ಮಹಾನಗರಿಗೆ ಸಾರ್ವಜನಿಕ ಗಣಪತಿ ನೋಡಲು ಮಾರನೇ ದಿನ ಸಂಜೆಯ ನಸು ಕಪ್ಪಿನಲ್ಲಿ ಕೈ ಕೈ ಹಿಡಿದು ಪಿಸು ಮಾತಾಡುತ್ತ ನಡೆಯುತ್ತಿದ್ದೆವು.ಆಗೆಲ್ಲ ದೊಡ್ಡದಾಗಿ ಸದ್ದು ಮಾಡುವ ಸಿಡಿಮದ್ದುಗಳನ್ನ ಸಿಡಿಸಿದಾಗ ನನ್ನ ಮನ ಕುಷಿಪಡುತ್ತಿತ್ತು ಯಾಕೆಂದರೆ ನೀನು ಇನ್ನಷ್ಟು ನನ್ನ ಬಿಗಿಯಾಗಿ ಹಿಡಿದಿರುತ್ತಿದ್ದೆಯಲ್ಲ ಎಂದು.. ಗೆಳತಿ ಈ ಸಲದ ಗಣೇಶ್ ಹಬ್ಬಕ್ಕೆ ಬೆಂಗಳೂರೆಂಬ ಮಾಯಾ ನಗರಿ ಯಾವ ರೀತಿ ಸಜ್ಜಾಗಿದೆ ಎಂದು ನಿನ್ನಲ್ಲಿ ಹೇಳಬೇಕು.. ಎಂದು ಆತುರದಿಂದ ಓಡೋಡಿ ಬಂದೆ.. ಬಾಲ್ಯದಿಂದಲೂ ನನ್ನ ಕೊರೆತವನ್ನ ಸಹನೆಯಿಂದ ಕೇಳಿದವಳು ನೀನು. ನಿನಲ್ಲದೆ ಇನ್ನಾರು ಕೇಳುವರು??? ಆದರೆ ನೀನು ಸಿಗಲಿಲ್ಲ... ಅದಕ್ಕಾಗಿಯೇ ಈ ನನ್ನ ಕೊರೆತ..
ಮೊನ್ನೆ ಮೊನ್ನೆ ಎಂದಿನಂತೆ ಗಣೇಶ, ತಾಯಿ ಸಹಿತ ಮನೆ ಮನೆಗೂ ಬಂದು ಆಶೀರ್ವದಿಸಿ ತೆರಳಿದ.. ಬರೆ ಮನೆ ಮನೆಗೆ ಅಂದರೇ ತಪ್ಪಾದಿತು.. ಬೀದಿ ಬೀದಿಗಳಲ್ಲಿ ಚರಂಡಿ ಸ್ಲ್ಮ, ಮತ್ತು ಜನರೇ ಓಡಾಡಲು ಅಸಹ್ಯ ಪಡುವ ಜಾಗಗಳಲ್ಲಿಯೂ ಹಾದು ಹೋದ.. ಬೆಂಗಳೂರು ಅಂಥ ಮಹಾನಗರಿ ಅಲ್ಲಿ ಇನ್ನು ಗಣೇಶ ಕೆಲವು ಬಿದಿಗಳಲ್ಲಿ ಬಂದಿಲ್ಲ. ಬರುವ ತಯಾರಿಯಲ್ಲಿದ್ದಾನೆ.. ಇಂಥ ಸಂಧರ್ಭದಲ್ಲಿ ನನಗೆ ಈ ಮೇಲಿನ ಪ್ರಶ್ನೆ ಕಾಡುತ್ತಿದೆ.... ನನ್ನ ಮನದ ಈ ಪ್ರಶ್ನೆಗೆ ನೀನು ಉತ್ತರಿಸುವೆಯೆಂದು ನಂಬಿರುವೆ...
ಲೋಕಮಾನ್ಯರು ನಮ್ಮಲ್ಲಿ ಒಗ್ಗಟ್ಟನ್ನ ತಂದು ಸ್ವಾತಂತ್ರ್ಯಕ್ಕಾಗಿ ಹೊರಡುವಂತ ಉತ್ಕಟವಾದ ದೇಶ ಪ್ರೇಮದ ಜಾಗ್ರತಿಗಾಗಿ ಈ ಗಣೇಶ್ ಹಬ್ಬವನ್ನು ಸಾರ್ವತ್ರಿಕಗೊಳಿಸಿದರೆಂದು ಇತಿಹಾಸ ಓದಿದ ನಮ್ಮಗಳಿಗೆಲ್ಲ ಗೊತ್ತಿದೆ.. ಆದ್ರೆ ಇಂದಿನ ಮತ್ತು ಅಂದಿನ ಸಾರ್ವತ್ರಿಕ ಗಣೇಶೋತ್ಸವದ ಆಚರಣೆಗಳು ಎಷ್ಟು ಭಿನ್ನ. ಇಂದಿನ ಸಮಾಜದಲ್ಲಿ ನಾವು ಆಚರಿಸುವ ಗಣೇಶೋತ್ಸವ ಯಾವ ಹಂತ ತಲುಪಿದೆ ಎಂದರೆ ನಿಜಕ್ಕೂ ತಿಲಕರೆನಾದರೂ ಇದ್ದಿದ್ದರೆ ಹುಟ್ಟ ಕ್ರಾಂತಿಕಾರಿಗಳಾದ ಅವರು ಬಹುಷಃ ಕೂಡಲೇ ಇದನ್ನ ಪ್ರತಿಭಟಿಸುತ್ತಿದ್ದರು... ಆಗ ಅವರನ್ನು ನಾವು ಯಾವ ರೀತಿ ಕರೆಯುತ್ತಿದ್ದೆವು ವಯಸ್ಸಾದ ಅರಳು ಮರಳು ಎಂದೇ..??? ಅರೆಹುಚ್ಚೂ ಎಂದೇ??? ಈ ಸಮಾಜ ಯಾವ ಮಹಾಪುರುಷರನ್ನ ಬದುಕಿರುವಾಗ ಹೋಗಲಿದೆ ಹೇಳು??? ನನ್ನನ್ನೇ ತಗೋ ನೀನು ಹತ್ತಿರವಿರುವಾಗಲೆಲ್ಲ ಕೋತಿ ತರಹಇರುವೆಯೆಂದು ಕೆಣಕಿ ಈಗ ನೀನು ಸನಿಹವಿಲ್ಲವೆಂಬ ಕಾರಣಕ್ಕೋ ನಾನರಿಯೆ. ನಿಜಕ್ಕೂ ನೀನು ಎಷ್ಟು ಸಹಜ ಸುಂದರಿ ಎಂದು ದಿನವು ಜಪಿಸುತ್ತಿಲ್ಲವೇ?? ಅಂತೆಯೇ ನಮ್ಮ ಸಮಾಜ ..
ದೇಶ ಪ್ರೇಮದ ಒಗ್ಗಟ್ಟಿನ ಸಂಕೇತವಾಗಿ ಅಂದು ಆರಂಭವಾದ ಗಣೇಶೋತ್ಸವಕ್ಕೂ ಇಂದಿನ ಗಣೇಶೋತ್ಸವದ ಆಚರಣೆಗೂ ಎಷ್ಟೆಲ್ಲಾ ಅಜಗಜಾಂತರ ಇಂಥ ಗಣೇಶೋತ್ಸವ ನಮಗೆ ಬೇಕೇ?
ಗಣೇಶ್ ಹಬ್ಬ ಬಂತೇದರೆ ಸಾಕು ನಾಯಿ ಕೊಡೆ ಗಳಂತೆ ಏಳುವ ಗಣೇಶೋತ್ಸವ ಸಂಘಗಳು, ಯಾರು ಯಾರಿಂದಲೋ ಹಣ ಸಂಗ್ರಹಿಸಿ ಗಣೇಶನನ್ನು ತರುತ್ತವೆ.. ನಿಜಕ್ಕೂ ಮನಸ್ಸು ಭಾರವಾಗುವುದು.. ಆ ನಮ್ಮ ನೆಚ್ಚಿನ ಗಣೇಶನನ್ನು ಮಾರಾಟದ ಸರಕಿನಂತೆ.. ದುಡ್ಡು ಮಾಡುವ ಸಾಧನದಂತೆ ನಡೆಸಿಕೊಳ್ಳುವುದನ್ನು ನೋಡಿ.. ನಿಜವಾದ ದೇಶಪ್ರೇಮವು ಇಲ್ಲ.. ದೇವರ ಮೇಲಿನ ಭಕ್ತಿಯನ್ನು ನಾ ಕಾಣೆ ಗೆಳತಿ ನೀನೆ ಎಲ್ಲಾದರು ಕಂಡಿರುವೆಯ??? ಸಂಗ್ರಹಿಸಿದ ಹಣವನ್ನು ಯಾವ ಸಾಮಾಜಿಕ, ಸಾಂಸ್ಕ್ರತಿಕ ಕೆಲಸಗಳಿಗೆ ಬಳಸಿರುವುದನ್ನ ನಾನು ಅರಿಯೆನು, ನಿನಗೆ ಏನಾದ್ರು ತಿಳಿದಿದೆಯೇನು ನನ್ನ ಒಲವೇ. ಗಣೇಶನನ್ನು ವಿಸರ್ಜಿಸಿ ಕಳುಹಿಸಿ ಕೊಡುವ ಬಗೆ ಕಂಡಾಗ ನಿಜಕ್ಕೂ ಮನಕ್ಕೆ ಘಾಸಿ ಆಗುತ್ತದೆ.... ಅಲ್ಲಾ ಗೆಳತಿ, ಈ ಕಾಮೊದ್ರೆಕಿತ ಸಿನೆಮ ಹಾಡುಗಳಿಗೂ.. ಬ್ರೇಕು ಡಾನ್ಸ್ ಗಳಿಗೂ.. ಕುಡಿತದ ಮೋಜು ಮಸ್ತಿಗೂ ಆ ನಮ್ಮ ಮುದ್ದು ಗಣಪನಿಗೂ ಎಲ್ಲಿಯ ಸಂಭಂದ... ಅವೆಲ್ಲದರ ಅರ್ಥವೇನು ಸುವಿಚಾರಿಣಿ ???
ಆ ಸಂಘಟನೆಗಳು, ಆ ಹಣಗಳನ್ನು ಯಾವುದಾದರು ಸಾಮಾಜಿಕ, ಸಾಂಸ್ಕ್ರತಿಕ ಕೆಲಸಗಳಿಗೆ ಸದ್ವಿನಿಯೋಗ ಮಾಡಿದ್ದರೆ ಎಷ್ಟು ಚೆಂದ... ಆ ನಮ್ಮ ಗಣಪನಿಗೂ ಬಹುಷಃ ಆನಂದವಗುತ್ತಿತೇನೋ... ಆದ್ರೆ ಈ ಸಂಘಟನೆಗಳು ಗಣೇಶ ಹಬ್ಬ ಮುಗಿದ ಮೇಲೆ ಮಾಯವಾಗುತ್ತವೆ.. ಇನ್ನೂ ಅವುಗಳನ್ನ ಕಾಣಬೇಕಾದರೆ ಮತ್ತೆ ಗಣೇಶ ಹಬ್ಬವೇ ಬರಬೇಕು... ಪ್ರತಿ ಚುನಾವಣೆಗಳಲ್ಲಿ ನಮ್ಮ ರಾಜಕೀಯ ಪ್ರತಿನಿಧಿಗಳು ನಮ್ಮ ಕಾಲುತಾಗುವಂತೆ... ಇನ್ನೊಂದು ಗಣೇಶ್ ಹಬ್ಬಕ್ಕೆ ಇವರುಗಳು ಹಾಜರ್... ಎಂಥ ವಿಚಿತ್ರ !!!
ಓ ನನ್ನ ಒಡತಿ ನನ್ನ ಮನದ ಬೇಗುದಿಯನ್ನ ಅರುಹಿದ್ದೇನೆ ಇವಾವುವೂ ನೀನು ಈ ವರ್ಷದ ಗಣೇಶ ಹಬ್ಬದಲ್ಲಿ ನನ್ನೊಟ್ಟಿಗೆ ಕಾಲ ಕಳೆಯಲಿಲ್ಲ ಎಂಬ ಬೇಸರದಿಂದ ಹೊರಹೊಮ್ಮಿದವು ಎಂದು ಹಗುರಾಗಿ ಭಾವಿಸದಿರು.. ಆದರು ನಿನ್ನೊಟ್ಟಿಗೆ ಗಣೇಶನನ್ನು ನೋಡಲು ತಿರುಗಿರುವುದನ್ನ ನೆನೆಸಿಕೊಂಡಾಗಲೆಲ್ಲ ಗಣೇಶೋತ್ಸವ ಬೇಕು ಅನ್ನಿಸದಿರಲು ಸಾಧ್ಯವೇ...ಕೈ ಕೈ ಹಿಡಿದು ಗಣೇಶನ್ ನೋಡುವ ಆ ಸಂಬ್ರಮದಗಳಿಗೆ ಮತ್ತೆ ಬಾರದೆಂದು ತಿಳಿದು ನಾನು ಈ ಮಾತು ಹೇಳುತ್ತಿಲ್ಲ ... ಆ ಸವಿ ನೆನೆಪು ಏನೇ ಇದ್ದರು... ಅದು ತುಂಬಾ ಮಾನಸಿಕ ವೇದನೆ.. ಪದಗಳಲ್ಲಿ ಬಂಧಿಸಲಾಗದ ಮನದ ಹಸಿಯಾದ ಗಾಯ ಕಾಣೆ ಅದು ನಮ್ಮಿಬ್ಬರಿಗೆ ಸಂಬಂದಿಸಿದ ಖಾಸಗಿ ವಿಚಾರ..
ಆ ಬೇಸರ ಏನಿದ್ದರು... ಇದು ಮಾತ್ರ ತುಂಬಾ ಸಾಮಾಜಿಕ ಕಳಕಳಿಯಿಂದ ಹೊರಹೊಮ್ಮಿದ ಪ್ರಶ್ನೆಗಳು... ನೀನು ನಂಗೆ ಸಮಂಜಸವಾಗಿ ಉತ್ತರಿಸುವೆಯೇನು ?? ಉತ್ತರಿಸುವೆ ಎಂದೇ ನಂಬಿರುವೆ...
ನಿನ್ನ ಪ್ರೀತಿಯ,
ಬೆನಕ..
"ಸುಮುಖ" ಅಕ್ಟೋಬರ್ ೨೦೧೦ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.
